Friday, September 30, 2016

ಮಹಾತ್ಮಾಗಾಂಧಿ ಸೇವಾ ಚನ್ನಮ್ಮ ಹಳ್ಳಿಕೇರಿಗೆ ಪ್ರಶಸ್ತಿ


ಬೆಂಗಳೂರು:(kannadaevision.in) ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಚನ್ನಮ್ಮ ಹಳ್ಳಿಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. 

ಈ ಪ್ರಶಸ್ತಿ ₹ 5 ಲಕ್ಷ ಮೊತ್ತವನ್ನು ಒಳಗೊಂಡಿದೆ. ಅ. 2 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹಾವೇರಿ ಜಿಲ್ಲೆ ಹೊಸರಿತ್ತಿಯಲ್ಲಿ 1931ರಲ್ಲಿ ಜನಿಸಿದ ಚನ್ನಮ್ಮ ಅವರು, ಮಹಾತ್ಮಗಾಂಧಿಯವರ ಆದರ್ಶವನ್ನು ಅನುಸರಿಸುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಹೊಸರಿತ್ತಿಯಲ್ಲಿ  ತಮ್ಮ ತಾತ ಗುದ್ಲಪ್ಪ ಹಳ್ಳಿಕೇರಿ ಸ್ಥಾಪಿಸಿದ್ದ ಗಾಂಧಿ ಆಶ್ರಮದೊಂದಿಗೆ ಒಡನಾಟ ಇಟ್ಟುಕೊಂಡು ಬೆಳೆದವರು.

key word: chennamma-hallikeri-prize-reciving

ದಲಿತರ ಕಲ್ಯಾಣ ಕಾರ್ಯಕ್ರಮಕ್ಕೆ ₹ 20 ಸಾವಿರ ಕೋಟಿ ಅನುದಾನ 259 ದಲಿತ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರ



ಬೆಂಗಳೂರು:(kannadaevision.in) ಯಲಹಂಕದ ಅಂಬೇಡ್ಕರ್‌ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ 259 ದಲಿತ ಕುಟುಂಬಗಳಿಗೆ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ದಲಿತರ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಸರ್ಕಾರ ಪ್ರತಿವರ್ಷ ₹20 ಸಾವಿರ ಕೋಟಿ ಅನುದಾನ ಒದಗಿಸುತ್ತಿದೆ. ನಗರದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ರೂಪಿಸಲಾಗುತ್ತಿದೆ’ ಎಂದರು.

ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ ಅವರು, ‘ಈ ಪ್ರದೇಶದಲ್ಲಿ 60 ವರ್ಷಗಳಿಂದ ದಲಿತರು ವಾಸ ಮಾಡುತ್ತಿದ್ದಾರೆ. ಯಾವಾಗ ಗುಡಿಸಿಲುಗಳನ್ನು ತೆರವು ಮಾಡುತ್ತಾರೋ ಎಂಬ ಆತಂಕದಲ್ಲೇ ಬದುಕುತ್ತಿದ್ದರು. ಆದರೆ, ಈಗ ನಿರಾತಂಕವಾಗಿ ವಾಸಮಾಡಬಹುದು’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಅವರು, ‘ಮನೆ, ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ತೊಡಗುವ ಕಾರ್ಮಿಕರು ಸ್ವಂತ ಸೂರಿನಲ್ಲಿ ವಾಸ ಮಾಡಬೇಕೆಂಬ ಉದ್ದೇಶದಿಂದ ನಿವೇಶನದ ಹಕ್ಕುಪತ್ರಗಳನ್ನು ವಿತರಿಸಲಾಗಿದೆ’ ಎಂದರು. ಮೇಯರ್‌ ಜಿ.ಪದ್ಮಾವತಿ ಮಾತನಾಡಿ, ‘ಮೇಯರ್‌ ಆಗಿ ಪ್ರಮಾಣವಚನ ಸ್ವೀಕರಿಸಿ ಭಾಗವಹಿಸಿದ ಮೊದಲ ಕಾರ್ಯಕ್ರಮವಿದು. ಹಕ್ಕುಪತ್ರಗಳನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು’ ಎಂದು ಹೇಳಿದರು.

ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ
‘ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಿದ್ದಾರೆ. ಹೀಗಾಗಿ ನಾನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದೇನೆ’ ಎಂದು ಕೆ.ಜೆ.ಜಾರ್ಜ್‌ ಹೇಳಿದರು.

keyword: yallahanka-dalith-property-paper


ಜಯಲಲಿತಾ ಆರೋಗ್ಯದ ವದಂತಿಗಳಿಗೆ ತೆರೆ ಎಳೆಯಿರಿ: ತಮಿಳು ನಾಡು ಸರ್ಕಾರಕ್ಕೆ ಕರುಣಾನಿಧಿ ಒತ್ತಾಯ


ಚೆನ್ನೈ: (kannadaevision.in)ಎಐಡಿಎಂಕೆ ವರಿಷ್ಠೆ, ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹಬ್ಬುತ್ತಿರುವ ವದಂತಿಗಳಿಗೆ ತೆರೆ ಎಳೆಯುವಂತೆ ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಜ್ವರದ ಸಮಸ್ಯೆಯಿಂದ ವಾರದ ಹಿಂದೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುವ ಜಯಲಲಿತಾ ಅವರು ಶೀಘ್ರ ಗುಣಮುಖ ಹೊಂದಲಿ ಎಂದು ಹಾರೈಸಿರುವ ಕರುಣಾನಿಧಿಯವರು ಅವರ ಆರೋಗ್ಯದ ಬಗ್ಗೆ ಜನತೆಗೆ ಸರಿಯಾದ ಮಾಹಿತಿ ನೀಡಲಿ ಎಂದು ಹೇಳಿದ್ದಾರೆ.
''ನಾನು ಜಯಲಲಿತಾ ಅವರ ತತ್ವ, ಅಭಿಪ್ರಾಯಗಳನ್ನು ವಿರೋಧಿಸುತ್ತಿದ್ದರೂ ಅವರು ಶೀಘ್ರವೇ ಗುಣಮುಖರಾಗಿ ಎಂದಿನಂತೆ ಕಚೇರಿ ಕರ್ತವ್ಯಕ್ಕೆ ಹಾಜರಾಗಲಿ ಎಂದು ಆಶಿಸುತ್ತೇನೆ'' ಎಂದು ಹೇಳಿದ್ದಾರೆ.
ಜಯಲಲಿತಾ ಅವರು ಚಿಕಿತ್ಸೆ ಪಡೆಯುತ್ತಿರುವ ಚೆನ್ನೈನ ಅಪೋಲೋ ಆಸ್ಪತ್ರೆ ಅವರ ಆರೋಗ್ಯದ ಬಗ್ಗೆ ಸುದ್ದಿ ನೀಡುತ್ತಿದ್ದರೂ ಕೂಡ ಕೆಲವು ಅನಪೇಕ್ಷಿತ ವದಂತಿಗಳು ಹಬ್ಬುತ್ತಿದ್ದು, ಉದ್ದೇಶಪೂರ್ವಕವಾಗಿ ಕೆಲವರು ಇದನ್ನು ಹಬ್ಬಿಸುತ್ತಿದ್ದಾರೆ ಎಂದರು.
''ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಸುಮ್ಮನೆ ವದಂತಿ ಹರಡುತ್ತಿದ್ದಾರೆ. ಆದುದರಿಂದ ಮುಖ್ಯಮಂತ್ರಿಯವರ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಜನತೆಗೆ ಗೊತ್ತಾಗಲು ಸರ್ಕಾರ ವಿಷಯ ತಿಳಿಸಬೇಕು. ಮುಖ್ಯಮಂತ್ರಿಯವರು ಆಸ್ಪತ್ರೆಯಲ್ಲಿರುವ ಭಾವಚಿತ್ರ ಬಿಡುಗಡೆ ಮಾಡಿದರೆ ಒಳ್ಳೆಯದು ಎಂದು ಕರುಣಾನಿಧಿ ಹೇಳಿದ್ದಾರೆ.
ಜಯಲಲಿತಾ ಅವರು ಸೆಪ್ಟೆಂಬರ್ 22ರಂದು ತೀವ್ರ ಜ್ವರ ಮತ್ತು ಡಿ ಹೈಡ್ರೇಷನ್ ಗೆ ಬಾಧೆಗೆ ಒಳಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರಿಗೆ ಕೆಲ ದಿನಗಳವರೆಗೆ ಆಸ್ಪತ್ರೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ.
keywword: chennai-jayalalitha-karunanidhi

ಮುಖ್ಯಶಿಕ್ಷಕನ ಕ್ರೂರಶಿಕ್ಷೆ


ಮಂಗಳೂರು,(kannadaevision.in) ಸೆ.೩೦- ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ನಿಟ್ಟಡೆಯಲ್ಲಿರುವ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯ ಮೇಲೆ ಮೃಗೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದ ಪ್ರಕರಣ ನಡೆದು ವಾರ ಕಳೆಯುತ್ತಿದ್ದರೂ ಪೊಲೀಸರು ಆರೋಪಿ ಶಿಕ್ಷಕನ ಮೇಲೆ ಕಾನೂನು ಕ್ರಮ ಜರುಗಿಸಿಲ್ಲ. ತಲೆ ಹಾಗೂ ಕೈಗೆ ಗಂಭೀರವಾಗಿ ಗಾಯಗೊಂಡಿರುವ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಪೊಲೀಸರು ಯಾರದ್ದೋ ಒತ್ತಡಕ್ಕೆ ಮಣಿದು ಶಿಕ್ಷಕನನ್ನು ಬಂಧಿಸಲು ಹಿಂದೇಟು ಹಾಕುತ್ತಿರುವ ಬಗ್ಗೆ ನಾಗರಿಕರು ಆಕ್ರೋಶಗೊಂಡಿದ್ದಾರೆ.
ಘಟನೆಯ ವಿವರ:
ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಒಂಬತ್ತನೇ ತರಗತಿ ಕಲಿಯುತ್ತಿರುವ ಕೇರಳ ಮೂಲದ ಕ್ರೈಸ್ತ ವಿದ್ಯಾರ್ಥಿನಿ ಮುಖ್ಯ ಶಿಕ್ಷಕರ ರೌದ್ರಾವತಾರಕ್ಕೆ ಸಿಕ್ಕಿ ನಲುಗಿದವಳು. ಕಳೆದ ಸೆ.೨೩ರಂದು ಘಟನೆ ನಡೆದಿದ್ದು ಬೆಳಗ್ಗಿನ ಜಾವ ಸಂತಸ್ತ ವಿದ್ಯಾರ್ಥಿನಿ ಮತ್ತು ಇನ್ನೋರ್ವಳನ್ನು ಸ್ಟಾಫ್ ರೂಂಗೆ ಕರೆದಿದ್ದ ಶಿಕ್ಷಕ ವೇಣೂರು ನಿವಾಸಿ ಗಿರೀಶ್(೩೬) ಎಂಬಾತ ಬಾಲಕಿಯ ಮೇಲೆ ಹಲ್ಲೆ ಮಾಡಿದ್ದ. ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ತಲೆ ಮತ್ತು ಕೈಗೆ ಹಲ್ಲೆ ಮಾಡಿದ್ದರಿಂದ ಬಾಲಕಿಯ ತಲೆಗೆ ಗಂಭೀರ ಗಾಯಗಳಾಗಿತ್ತು. ಕೈಯಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಈ ಬಗ್ಗೆ ಬಾಲಕಿ ಕೇರಳದಲ್ಲಿರುವ ತನ್ನ ಹೆತ್ತವರಿಗೆ ವಿಷಯ ತಿಳಿಸಿದ್ದಳು.
ಬಾಲಕಿಯ ಹೆತ್ತವರು ಮರುದಿನ ಶಾಲೆಗೆ ಆಗಮಿಸಿ ಬಾಲಕಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ತಲೆಗೆ ಐದು ಸ್ಟಿಚ್ ಹಾಕಲಾಗಿತ್ತು. ಈ ಬಗ್ಗೆ ಚೈಲ್ಡ್‌ಲೈನ್ ಅಧಿಕಾರಿಗಳಿಗೆ ದೂರನ್ನು ಸಲ್ಲಿಸಲಾಗಿತ್ತು. ಅದರಂತೆ ಆಸ್ಪತ್ರೆಗೆ ಧಾವಿಸಿದ ಚೈಲ್ಡ್‌ಲೈನ್ ನಿರ್ದೇಶಕ ರೆನ್ನಿ ಡಿಸೋಜ ಅವರು ಬಾಲಕಿಯ ಬಳಿ ಘಟನೆಯ ಸಂಪೂರ್ಣ ವಿವರ ಪಡೆದು ವೇಣೂರು ಠಾಣೆಗೆ ದೂರನ್ನು ಸಲ್ಲಿಸಲಾಗಿತ್ತು. ವೇಣೂರು ಠಾಣೆಯಲ್ಲಿ ಆರೋಪಿ ಮುಖ್ಯಶಿಕ್ಷಕ ಗಿರೀಶ್ ವಿರುದ್ಧ ಪ್ರಕರಣ ದಾಖಲಾಗಿ ಐದು ದಿನಗಳು ಕಳೆದಿದ್ದು ಡಿಸಿಪಿ ಅವರಿಗೂ ದೂರು ನೀಡಲಾಗಿದೆ. ಆದರೆ ಪೊಲೀಸ್ ಇಲಾಖೆ ಪ್ರಕರಣವನ್ನು ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಬಾಲಕಿಯನ್ನು ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
‘ದೂರನ್ನೇ ನೀಡಿಲ್ಲ’
ಪ್ರಕರಣದ ಬಗ್ಗೆ ‘ಸಂಜೆವಾಣಿ’ ಪತ್ರಿಕೆ ವೇಣೂರು ಪೊಲೀಸ್ ಠಾಣೆಯ ಅಧಿಕಾರಿ ಲೋಲಾಕ್ಷ ಅವರನ್ನು ಸಂಪರ್ಕಿಸಿ ಘಟನೆಯನ್ನು ವಿವರಿಸಿದಾಗ ‘ಅಂಥ ಪ್ರಕರಣ ನಡೆದ ಬಗ್ಗೆ ಇಲ್ಲಿ ಯಾವುದೇ ದೂರು ದಾಖಲಾಗಿಲ್ಲ. ನಮಗೆ ಅದರ ಬಗ್ಗೆ ಮಾಹಿತಿಯೇ ಇಲ್ಲ. ಅದು ಚೈಲ್ಡ್‌ಲೈನ್ ಅವರಲ್ಲಿ ದೂರು ದಾಖಲಾಗಿರಬೇಕು’ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಿವರಾಮ ಎಂಬವರು ದೂರು ಸ್ವೀಕರಿಸಲ್ಪಟ್ಟ ಎಫ್‌ಐಆರ್ ಪ್ರತಿ ಇದ್ದರೂ ಪೊಲೀಸರು ಪ್ರಕರಣದ ಬಗ್ಗೆ ತಿಳಿದೇ ಇಲ್ಲ ಎನ್ನುತ್ತಿರುವುದು ಅನೇಕ ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಶಾಲಾ ಬಾಲಕಿಗೆ ಮುಖ್ಯಶಿಕ್ಷಕರೊಬ್ಬರು ಅಮಾನವೀಯವಾಗಿ ಹಲ್ಲೆಗೈದಿರುವ ಪ್ರಕರಣದ ಗಂಭೀರತೆ ಅರಿತು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಲು ಮುತುವರ್ಜಿ ವಹಿಸಬೇಕಿದ್ದ ಪೊಲೀಸ್ ಅಧಿಕಾರಿಗಳು ಸುಮ್ಮನಿದ್ದು ಏನೂ ನಡೆದೇ ಇಲ್ಲ ಎನ್ನುತ್ತಿರುವ ಹಿಂದೆ ಕಾಣದ ಕೈಗಳು ಕಸರತ್ತು ನಡೆದಿರುವ ಬಗ್ಗೆಯೂ ನಾಗರಿಕರು ಸಂದೇಹ ವ್ಯಕ್ತಪಡಿಸುವಂತಾಗಿದೆ.
-ಲೋಲಾಕ್ಷ, ವೇಣೂರು ಎಸ್.ಐ.
‘ದೂರು ನೀಡಿದ್ದೇವೆ, ಕಠಿಣ ಕ್ರಮ ಜರುಗಿಸಬೇಕಿದೆ’
‘ವೇಣೂರಿನ ಕುಂಭಶ್ರೀ ಆಂಗ್ಲಮಾಧ್ಯಮ ವಸತಿ ಶಾಲೆಯಲ್ಲಿ ಮುಖ್ಯಶಿಕ್ಷಕ ಗಿರೀಶ್ ಎಂಬವರು ಬಾಲಕಿಯ ಮೇಲೆ ಅಮಾನುಷ ಹಲ್ಲೆ ಮಾಡಿರುವುದು ಶಿಕ್ಷಾರ್ಹ ಅಪರಾಧ. ಆತನ ವಿರುದ್ಧ ವೇಣೂರು ಠಾಣೆ ಮತ್ತು ಡಿಸಿಪಿ ಅವರಿಗೆ ದೂರು ನೀಡಲಾಗಿದೆ. ಬಾಲಕಿಯ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಶಿಕ್ಷಣ ಸಂಸ್ಥೆಯೇ ಭರಿಸಬೇಕಿದೆ ಮತ್ತು ಮುಂದೆ ಅದೇ ಶಿಕ್ಷಣ ಸಂಸ್ಥೆಯಲ್ಲಿ ಬಾಲಕಿ ಶಿಕ್ಷಣ ಮುಂದುವರಿಸುತ್ತಾಳೆಯೇ ಎಂಬ ಬಗ್ಗೆ ಕೌನ್ಸೆಲಿಂಗ್ ನಡೆಯಬೇಕು. ಆರೋಪಿಯನ್ನು ಪೊಲೀಸರು ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತು ಇನ್ನಷ್ಟು ಕಠಿಣ ಕ್ರಮಗಳನ್ನು ಚೈಲ್ಡ್‌ಲೈನ್ ತೆಗೆದುಕೊಳ್ಳಲಿದೆ.’ ಎಂದು ಘಟನೆಯ ಕುರಿತು  ಪ್ರತಿಕ್ರಿಯಿಸಿದ್ದಾರೆ.
key word: venur-school-teacher-news

ಖ್ಯಾತ ಮನೋವೈದ್ಯ ಡಾ. ಅಶೋಕ್‌ ಪೈ ಸ್ಕಾಟ್‌ಲ್ಯಾಂಡ್‌ನ‌ಲ್ಲಿ ವಿಧಿವಶ


ಬೆಂಗಳೂರು :kannadaevision.in) ರಾಜ್ಯದ ಪ್ರಖ್ಯಾತ ಮನೋರೋಗ ತಜ್ಞ ಡಾ.ಅಶೋಕ್‌ ಪೈ ಅವರು ಹೃದಯಾಘಾತದಿಂದ ಗುರುವಾರ ತಡರಾತ್ರಿ ಸ್ಕಾಟ್‌ಲ್ಯಾಂಡ್‌ನ‌ಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. 
ವಿಶ್ವ ಆರೋಗ್ಯ ಸಂಸ್ಥೆ ನಡೆಸಿಕೊಡುತ್ತಿದ್ದ  ವಿಚಾರ ಸಂಕಿರಣದಲ್ಲಿ ಭಾಗಿಯಾಗುವ ಸಲುವಾಗಿ  ಪತ್ನಿ ರಜನಿ ಪೈ ಅವರೊಂದಿಗೆ ಅವರು ಸ್ಕಾಟ್‌ಲ್ಯಾಂಡ್‌ಗೆ ತೆರಳಿದ್ದರು. ಹೋಟೆಲ್‍ನ ಕೋಣೆಯಲ್ಲಿ  ಹೃದಾಯಾಘಾತ ಸಂಭವಿಸಿದ್ದು ,ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತದರೂ ಚಿಕಿತ್ಸೆ ಫಲಕಾಣದೆ ಇಹಲೋಕ ತ್ಯಜಿಸಿದರು. 
ಮನೋರೋಗಿಗಳ ಪಾಲಿಗೆ ಆಶಾಕಿರಣವಾಗಿ ಪ್ರಥಮ ಉಷಾಕಿರಣ, ಅಘಾತ, ಕಾಡಿನ ಬೆಂಕಿ ಸೇರಿದಂತೆ ಕೆಲ ಮನೋರೋಗಗಳಿಗೆ ಸಂಬಂಧಿಸಿದ ಚಿತ್ರಗಳನ್ನೂ ನಿರ್ಮಾಣ ಮಾಡಿ, ಮನೋರೋಗಿಗಳಿಗಾಗಿ 10ಕ್ಕೂ ಹೆಚ್ಚು ಪುಸ್ತಕಗಳನ್ನೂ ಬರೆದ ಹಿರಿಮೆ ಡಾ.ಪೈ ಅವರದ್ದು. 
ರಾಜ್ಯ ಮಾನಸಿಕ ಆರೋಗ್ಯ ಕಾರ್ಯಪಡೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಡಾ. ಪೈ ಅವರಿಗೆ ಡಾ.ಸಿ.ರಾಯ್ ಪ್ರಶಸಿ, ರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿವಿಯ ಗೌರವ ಡಾಕ್ಟರೇಟ್, ಆರ್ಯಭಟ ಪ್ರಶಸ್ತಿ ಸೇರಿದಂತೆ ಅನೇಕ ಸನ್ಮಾನಗಳು ಪೈ ಅವರ ಸಾಧನೆಗೆ ಸಂದಿದ್ದವು. 
ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ನೀರವ ಮೌನ ಆವರಿಸಿದ್ದು, ನಾಳೆ ಸಂಜೆ ಪೈ ಅವರ ಮೃತ ದೇಹ ರಾಜ್ಯಕ್ಕೆ ತರಲಾಗುತ್ತಿದ್ದು, ಆ ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ತೆ ಮಾಡಿ  ಅಂತಿಮ ವಿಧಿವಿಧಾನ ನೇರವೇರಿಸಲಾಗುತ್ತದೆ ಎಂದು  ಕುಟುಂಬ ಮೂಲಗಳು ತಿಳಿಸಿವೆ
key word:  psychiatrist-ashok-pai-passed- away



Thursday, September 29, 2016

2.86 ಕೋಟಿ ವೆಚ್ಚ ಇಂದಿನಿಂದ ಹೂಡಿ ರೈಲು ನಿಲ್ದಾಣ ಆರಂಭ


ಬೆಂಗಳೂರು: (kannadaevision..in)ಐಟಿ ಉದ್ಯೋಗಿಗಳು ಎರಡು ವರ್ಷಗಳಿಂದ ಕಾತರರಿಂದ ಕಾಯುತ್ತಿದ್ದ ಹೂಡಿ ಬಳಿಯ ನೂತನ ರೈಲು ನಿಲ್ದಾಣ ಗುರುವಾರದಿಂದ (ಸೆ.29) ಕಾರ್ಯಾರಂಭ ಮಾಡಲಿದೆ. ನೈಋತ್ಯ ರೈಲ್ವೆಯ ಕೃಷ್ಣರಾಜಪುರ ಮತ್ತು ವೈಟ್​ಫೀಲ್ಡ್  ರೈಲು ನಿಲ್ದಾಣಗಳ ನಡುವೆ, ಮಹದೇವಪುರ ಕ್ಷೇತ್ರದ ಹೂಡಿ ಗೇಟ್ ಬಳಿ ₹2.86 ಕೋಟಿ ವೆಚ್ಚದಲ್ಲಿ  ಈ ರೈಲು ನಿಲ್ದಾಣ ನಿರ್ಮಿಸಲಾಗಿದೆ. ಇದಕ್ಕಾಗಿ ಸಂಸದ ಪಿ.ಸಿ.ಮೋಹನ್‌ ಅವರು ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ  ₹1.76 ಕೋಟಿ ಅನುದಾನನೀಡಿದ್ದಾರೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಅನುದಾನದಲ್ಲಿ ನಿರ್ಮಿಸಲಾದ, ದೇಶದ  ಪ್ರಥಮ ರೈಲು ನಿಲ್ದಾಣ ಇದಾಗಿದೆ.

‘ಈ ರೀತಿ ಎಲ್ಲಾ ಸಂಸದರು ರೈಲ್ವೆ ಅಭಿವೃದ್ಧಿಗೆ ತಮ್ಮ ನಿಧಿಯನ್ನು ವಿನಿಯೋಗಿಸಿದರೆ, ರೈಲ್ವೆ ಯೋಜನೆಗಳು ಯಶಸ್ವಿಯಾಗುತ್ತವೆ’ ಎಂದು  ರೈಲ್ವೆ ಸಚಿವ ಸುರೇಶ್‌ ಪ್ರಭು ರೈಲ್ವೆ ಬಜೆಟ್‌ ಮಂಡನೆಯ ಸಂದರ್ಭದಲ್ಲಿ ಅಭಿನಂದಿಸಿದ್ದರು.

ಟಿಕೆಟ್‌ ಬುಕ್ಕಿಂಗ್‌ ಕೇಂದ್ರ ನಿರ್ಮಾಣ ಕಾರ್ಯವೂ  ಪೂರ್ಣಗೊಂಡಿದೆ. ಎರಡು ಪ್ಲ್ಯಾಟ್‌ಫಾರಂಗಳಿಗೆ ಸಂಪರ್ಕ ಕಲ್ಪಿಸಲು ₹ 1.11 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸ್ಕೈವಾಕ್‌ ಕಾಮಗಾರಿ ಹೊರತುಪಡಿಸಿದರೆ, ರೈಲು ನಿಲ್ದಾಣ ಕಾರ್ಯಾರಂಭ ಮಾಡಲು ಎಲ್ಲ ರೀತಿಯಿಂದಲೂ ಸಜ್ಜಾಗಿದೆ.

‘ಹೂಡಿ ಪ್ರದೇಶದಲ್ಲಿ ಐ.ಟಿ ಕ್ಷೇತ್ರದ ಕಂಪೆನಿಗಳ ಸಂಖ್ಯೆ ಹೆಚ್ಚು ಇದೆ. ಇಲ್ಲಿ ಕೆಲಸಕ್ಕೆ ಬರುವ ಅನೇಕರು ಸ್ಯಾಟಲೈಟ್‌ ಗೂಡ್ಸ್‌ ಟರ್ಮಿನಲ್‌ನಲ್ಲಿ ರೈಲಿನಿಂದ ಇಳಿದು ಹಳಿಯ ಮೇಲೆ ನಡೆಯುತ್ತಿದ್ದರು. ಅಪಾಯವಿದ್ದರೂ ಜನರು ಇಲ್ಲಿ ಇಳಿದು ಹೋಗುತ್ತಾರೆ. ಅದನ್ನು ಅರಿತು ಇಲ್ಲೊಂದು ನಿಲ್ದಾಣ ಸ್ಥಾಪಿಸುವಂತೆ ಒತ್ತಾಯಿಸಿದ್ದೆವು’ ಎಂದು ಐ.ಟಿ ಉದ್ಯೋಗಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಈ ರೈಲು ನಿಲ್ದಾಣದಿಂದ ವೈಟ್‌ಫೀಲ್ಡ್‌ ಮತ್ತು ಐಟಿಪಿಎಲ್‌ ಪ್ರದೇಶದಲ್ಲಿರುವ ಸಾವಿರಾರು ಸಾಫ್ಟ್‌ವೇರ್‌ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. ‘ಈ ಮುಂಚೆ ಸ್ಯಾಟಲೈಟ್‌ ಗೂಡ್ಸ್‌ ಟರ್ಮಿನಲ್‌ ಬಳಿ ಸಿಬ್ಬಂದಿಗಾಗಿ ಕೆಲ ನಿಮಿಷ ರೈಲು ನಿಲ್ಲಿಸಲಾಗುತ್ತಿತ್ತು. ಅದನ್ನು ಬದಲಿಸಿ ನೂತನ ಹೂಡಿ ನಿಲ್ದಾಣದಲ್ಲಿ ಒಂದು ನಿಮಿಷ ನಿಲುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಗಳೂರು –ಬಂಗಾರಪೇಟೆ ಮಾರ್ಗವಾಗಿ ಚಲಿಸುವ 12 ಪ್ಯಾಸೆಂಜರ್‌ ರೈಲುಗಳು ಈ ನಿಲ್ದಾಣದಲ್ಲಿ ನಿಲ್ಲುವುದರಿಂದ ಸ್ಥಳೀಯರು ಟ್ರಾಫಿಕ್‌ ಸಮಸ್ಯೆ ಇಲ್ಲದೆ ನಗರ ದಂಡು (ಕಂಟೋನ್ಮೆಂಟ್‌) ಮತ್ತು ಬೈಯಪ್ಪನಹಳ್ಳಿ ರೈಲು ನಿಲ್ದಾಣಗಳಿಗೆ ಸುಲಭವಾಗಿ ಪ್ರಯಾಣಿಸಬಹುದು. ಇನ್ನೂ ಹೆಚ್ಚಿನ ರೈಲುಗಳಿಗೆ ಇಲ್ಲಿ ನಿಲುಗಡೆ ಒದಗಿಸುವ  ಬಗ್ಗೆಯೂ ಮಾತುಕತೆ ನಡೆದಿದೆ’ ಎಂದರು.

* ಕೈಗಾರಿಕಾ ಪ್ರದೇಶಕ್ಕೆ ಕೆಲಸಕ್ಕಾಗಿ ಬರುವ ಜನರು ಸಂಜೆ ಬಸ್‌ಗಳಲ್ಲಿ ಮರಳಲು ತೊಂದರೆಯಾಗುತ್ತಿತ್ತು. ಇದನ್ನು ತಪ್ಪಿಸಲು ರೈಲು ನಿಲ್ದಾಣ ನಿರ್ಮಿಸಬೇಕೆಂದು ಸಾರ್ವಜನಿಕರು ಕೋರಿದ್ದರು.
-ಪಿ.ಸಿ. ಮೋಹನ್‌, ಸಂಸದ
key word :new-train-service-start-bangalore 

ಸರ್ವಪಕ್ಷ ಮತ್ತು ಮಂತ್ರಿ ಪರಿಷತ್‌ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ನೀರು ಬಿಡದಿರಲು ನಿರ್ಣಯ

ಬೆಂಗಳೂರು:(kannadaevision.in) ಕಾವೇರಿ ಜಲ ವಿವಾದ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಗುರುವಾರ ಕರೆದಿರುವ ಸಭೆಯಲ್ಲಿ ತೀರ್ಮಾನ ಆಗುವವರೆಗೆ  ತಮಿಳುನಾಡಿಗೆ ನೀರು ಬಿಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬುಧವಾರ ಮಧ್ಯಾಹ್ನ ನಾಲ್ಕು ತಾಸು ನಡೆದ ಮಂತ್ರಿ ಪರಿಷತ್‌ ಸಭೆಯಲ್ಲಿ ತಮಿಳುನಾಡಿಗೆ ನೀರು ಬಿಡದಿರುವ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಬಳಿಕ ಸ್ವತಃ ಮುಖ್ಯಮಂತ್ರಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಸಭೆಯ ತೀರ್ಮಾನ ತಿಳಿಸಿದರು.

ಬೆಳಿಗ್ಗೆ ನಡೆದ ಸರ್ವ ಪಕ್ಷಗಳ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಬೇಡ ಎಂದು  ಕೇಂದ್ರ ಸಚಿವರು, ಆಡಳಿತ ಮತ್ತು  ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಗುರುವಾರ ನವದೆಹಲಿಯಲ್ಲಿ ನಡೆಸಲಿರುವ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಕೈಗೊಳ್ಳುವ ತೀರ್ಮಾನ ಆಧರಿಸಿ, ಸುಪ್ರೀಂಕೋರ್ಟ್‌ ಆದೇಶ ಪಾಲನೆ ವಿಷಯದಲ್ಲಿ ಮುಂದಿನ ಹೆಜ್ಜೆ ಇಡಲು ಸರ್ವಪಕ್ಷ ಸಭೆ ತೀರ್ಮಾನಿಸಿತು.

‘ಕೇಂದ್ರ ಸರ್ಕಾರ ಎರಡೂ ರಾಜ್ಯಗಳ ಸಭೆ ಕರೆದಿರುವುದರಿಂದ ಸೆ.30 ರವರೆಗೆ 6 ಸಾವಿರ ಕ್ಯುಸೆಕ್‌ ನೀರು ಬಿಡಬೇಕು ಎಂಬ ಸುಪ್ರೀಂಕೋರ್ಟ್‌ ಆದೇಶ ಪಾಲನೆಯನ್ನು ಗುರುವಾರದವರೆಗೆ ಮುಂದೂಡುವುದು ಒಳ್ಳೆಯದು ಎಂದು ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವರು, ಬಿಜೆಪಿ, ಜೆಡಿಎಸ್‌, ಸರ್ವೋದಯ ಪಕ್ಷಗಳ ನಾಯಕರು ಬಲವಾಗಿ ಪ್ರತಿಪಾದಿಸಿದರು ಎಂದು ಮುಖ್ಯಮಂತ್ರಿ ವಿವರಿಸಿದರು.

‘ತಮಿಳುನಾಡಿಗೆ ನೀರು ಬಿಡದಿರುವ ಬಗ್ಗೆ ವಿಧಾನಮಂಡಲದಲ್ಲಿ ಕೈಗೊಂಡ ನಿರ್ಣಯ, ಸಂಕಷ್ಟದ ಸ್ಥಿತಿಯಲ್ಲಿಯೂ ಸುಪ್ರೀಂಕೋರ್ಟ್‌ ಆದೇಶ ಪಾಲಿಸಿರುವ  ಬಗ್ಗೆ ಕೇಂದ್ರ ಸಚಿವರು ಕರೆದಿರುವ ಸಭೆಯಲ್ಲಿ ಮನವರಿಕೆ ಮಾಡಿಕೊಡುವೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ನಿಮ್ಮ ನಡೆ ನ್ಯಾಯಾಂಗ ನಿಂದನೆಯಾಗುವುದಿಲ್ಲವೆ?’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘ನೀರು ಬಿಡದಿರುವಂತೆ ವಿಧಾನಮಂಡಲ ಉಭಯ ಸದನಗಳಲ್ಲಿ ಕೈಗೊಂಡ ನಿರ್ಣಯವನ್ನು ಸರ್ಕಾರ ಪಾಲಿಸಿದೆ. ಶಾಸನಸಭೆಯ ಆದೇಶ ಪಾಲನೆಯ ಕರ್ತವ್ಯವನ್ನಷ್ಟೆ ನಾವು ಪಾಲನೆ ಮಾಡಿದ್ದೇವೆ. ಗುರುವಾರದ ಸಭೆ ಬಳಿಕ ಆ ಬಗ್ಗೆ ತೀರ್ಮಾನಿಸುತ್ತೇವೆ’ ಎಂದರು.

ಸಭೆಯಲ್ಲಿ ಭಾಗಿ:  ಸುಪ್ರೀಂಕೋರ್ಟ್‌ ಸೂಚನೆಯನ್ವಯ ಗುರುವಾರ ನಡೆಯಲಿರುವ ಸಂಧಾನ ಸಭೆಯಲ್ಲಿ ತಮ್ಮ ಜೊತೆ ಜಲಸಂಪನ್ಮೂಲ ಸಚಿವ  ಎಂ.ಬಿ. ಪಾಟೀಲ, ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಮುಖ್ಯ ಎಂಜಿನಿಯರ್‌ ಪಾಲ್ಗೊಳ್ಳಲಿದ್ದಾರೆ ಎಂದೂ ಅವರು ಹೇಳಿದರು.

ಇದಕ್ಕೆ ಮುನ್ನ ನಡೆದ ಸರ್ವ ಪಕ್ಷ ಸಭೆಯಲ್ಲಿ ‘ಕಾವೇರಿ ನೀರನ್ನು ಕುಡಿಯುವ ಉದ್ದೇಶಕ್ಕೆ ಹೊರತು ಅನ್ಯ ಉದ್ದೇಶಕ್ಕೆ  ಒದಗಿಸುವುದಿಲ್ಲ’ ವಿಧಾನಮಂಡಲ ಉಭಯ ಸದನಗಳಲ್ಲಿ ಕೈಗೊಂಡ ಸರ್ವಾನುಮತದ ನಿರ್ಣಯ ಉಲ್ಲಂಘಿಸಿದರೆ ಸದನದ ಹಕ್ಕುಚ್ಯುತಿಯಾಗುತ್ತದೆ ಎಂದು ಆಡಳಿತ ಮತ್ತು  ವಿರೋಧ ಪಕ್ಷಗಳ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು.

ವಿಶೇಷ ಅಧಿವೇಶನ ?
ತಮಿಳುನಾಡಿಗೆ ನೀರು ಬಿಡಲೇಬೇಕು ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಚಿಸಿದರೆ, ವಿಧಾನಮಂಡಲದ ವಿಶೇಷ ಅಧಿವೇಶನ ಹಾಗೂ ಮತ್ತೊಂದು ಸುತ್ತಿನ ಸರ್ವ ಪಕ್ಷ ಸಭೆ ಕರೆಯುವ ಚಿಂತನೆ ಸರ್ಕಾರದ ಮುಂದಿದೆ.

ಕರ್ನಾಟಕದ ಮಾರ್ಪಾಡು ಅರ್ಜಿ ಸೆ.30ರಂದು ಮತ್ತೊಮ್ಮೆ ವಿಚಾರಣೆಗೆ ಬರಲಿದೆ. ಅಕ್ಟೋಬರ್‌ 1ರಿಂದ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದರೆ, ಶನಿವಾರವೇ ವಿಧಾನಮಂಡಲ ಅಧಿವೇಶನ ಕರೆದು, ನೀರು ಒದಗಿಸಲು ಸಾಧ್ಯವಿಲ್ಲದಿರುವ ಕುರಿತು ನಿರ್ಣಯ ಕೈಗೊಳ್ಳಲು ಸರ್ಕಾರ ಆಲೋಚಿಸಿದೆ ಎಂದು ಗೊತ್ತಾಗಿದೆ.

* ನ್ಯಾಯಾಲಯಕ್ಕೆ ಅಗೌರವ ತೋರುವ ಉದ್ದೇಶ ಸರ್ಕಾರಕ್ಕಿಲ್ಲ. ಗುರುವಾರದ ಏನಾಗುವುದೊ ನೋಡಿಕೊಂಡು ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ.
–ಸಿದ್ದರಾಮಯ್ಯ, ಮುಖ್ಯಮಂತ್ರಿ

ಸಂಧಾನ ಸಭೆ ಇಂದು: ಕೇಂದ್ರ ತಂಡ ಕಳುಹಿಸುವ ಸಂಭವ
ನವದೆಹಲಿ: ಕರ್ನಾಟಕ ಮತ್ತು ತಮಿಳುನಾಡುಗಳ ನಡುವಿನ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಕೇಂದ್ರ ಸರ್ಕಾ ರದ ಮಧ್ಯಸ್ಥಿಕೆಯಲ್ಲಿ ಗುರುವಾರ ಸಂಧಾನ ಸಭೆ ನಡೆಯಲಿದೆ.

ಇಲ್ಲಿನ ಶ್ರಮ ಶಕ್ತಿ ಭವನದಲ್ಲಿರುವ ಜಲಸಂಪನ್ಮೂಲ ಸಚಿವಾಲಯದ ಸಭಾಂಗಣದಲ್ಲಿ ಬೆಳಿಗ್ಗೆ 11.30ಕ್ಕೆ ನಡೆಯಲಿರುವ ಸಭೆಯ ನೇತತ್ವವನ್ನು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ವಹಿಸಲಿದ್ದಾರೆ.

ರಾಜ್ಯದ ಪರ ಸಿದ್ದರಾಮಯ್ಯ, ಸಚಿವ ಎಂ.ಬಿ. ಪಾಟೀಲ, ಸರ್ಕಾರದ ಮುಖ್ಯ ಕಾರ್ಯ ದರ್ಶಿ ಅರವಿಂದ ಜಾಧವ್‌, ಜಲಸಂಪ ನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ ಸಿಂಗ್‌ ಭಾಗವ ಹಿಸುವರು. ಅನಾರೋಗ್ಯ ದಿಂದ ಬಳಲುತ್ತಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಬದಲಿಗೆ ಅಲ್ಲಿನ ಲೋಕೋಪಯೋಗಿ ಸಚಿವ ಈಡ ಪ್ಪಾಡಿ ಪಳನಿಸ್ವಾಮಿ, ಮುಖ್ಯ ಕಾರ್ಯ ದರ್ಶಿ ರಾಮಮೋಹನ ರಾವ್ ಪಾಲ್ಗೊಳ್ಳಲಿದ್ದಾರೆ.

ಅಧ್ಯಯನ ಸಾಧ್ಯತೆ: ಉಭಯ ರಾಜ್ಯಗ ಳಲ್ಲಿರುವ ಕಾವೇರಿ ಕಣಿವೆ ಪ್ರದೇಶ ದಲ್ಲಿನ ವಸ್ತುಸ್ಥಿತಿ ಅರಿಯುವ ನಿಟ್ಟಿನಲ್ಲಿ ನೀರಾವರಿ ತಜ್ಞರನ್ನು ಕಳುಹಿಸಿಕೊ ಡುವ ಮೂಲಕ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ನೀರು ಬಿಡುವಂತೆ ತಮಿಳುನಾಡು, ಬಿಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಪಟ್ಟು ಹಿಡಿಯುವ ಸಾಧ್ಯತೆಗಳೇ ಹೆಚ್ಚಾಗಿ ಇರುವುದರಿಂದ ವಾಸ್ತವಾಂಶವನ್ನು ಅರಿಯಲು ತಜ್ಞರ ತಂಡ ಕಳುಹಿಸಬಹುದು. ನಂತರ ಆ ವರದಿಯನ್ನು ಆಧರಿಸಿ ಎರಡೂ ರಾಜ್ಯಗಳ ನಡುವೆ ಸಂಧಾನ ಏರ್ಪಡಿಸಬಹುದು ಎನ್ನಲಾಗಿದೆ.

ಒಂದೊಮ್ಮೆ ಸಂಧಾನ ಸಾಧ್ಯವಾಗದಿದ್ದರೆ, ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೂ ಸಲ್ಲಿಸಿ ಗಮನ ಸೆಳೆಯಬಹುದು. ಈ ಮೂಲಕ ನ್ಯಾಯಯುತ ಆದೇಶ ನೀಡುವಂತೆಯೂ ಸೂಚ್ಯವಾಗಿ ತಿಳಿಸಬಹುದಾಗಿದೆ ಎಂದು ಜಲಸಂಪನ್ಮೂಲ ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬಿಜೆಪಿ ಮುಖಂಡರ ಮನವಿ: ಬಿಜೆಪಿ ಸಂಸದ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಕರ್ನಾಟಕದ ಕೇಂದ್ರ ಸಚಿವರು ಬುಧವಾರ ಸಂಜೆ ಸಚಿವೆ ಉಮಾ ಭಾರತಿ ಅವರನ್ನು ಭೇಟಿ ಮಾಡಿ ಕಾವೇರಿ ಜಲಾಶಯಗಳ ಕುರಿತ ವಸ್ತುಸ್ಥಿತಿ ಕುರಿತು ಮನವರಿಕೆ ಮಾಡಿದರು.

ಕರ್ನಾಟಕದಲ್ಲಿ ಮಳೆಯ ಕೊರತೆ ಎದುರಾಗಿದ್ದರಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದೆ. ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿದೆ. ವಾಸ್ತವಾಂಶ ಅರಿಯುವ ನಿಟ್ಟಿನಲ್ಲಿ ನೀರಾವರಿ ಮತ್ತು ಕಾನೂನು ತಜ್ಞರ ತಂಡವನ್ನು ಕಳುಹಿಸಿಕೊಡುವಂತೆ ಕೋರಲಾಯಿತು ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಅಧ್ಯಯನ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಕೋರಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ನೀರಾವರಿ ತಜ್ಞರನ್ನು ಕಾವೇರಿ ಕಣಿವೆ ಪ್ರದೇಶದ ಅಧ್ಯಯನಕ್ಕೆ ಕಳುಹಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.

ಸಚಿವರಾದ ಡಿ.ವಿ. ಸದಾನಂದಗೌಡ, ಅನಂತಕುಮಾರ್‌, ರಮೇಶ ಜಿಗಜಿಣಗಿ, ಸಂಸದರಾದ ಶೋಭಾ ಕರಂದ್ಲಾಜೆ, ಕರಡಿ ಸಂಗಣ್ಣ ಈ ಸಂದರ್ಭ ಹಾಜರಿದ್ದರು.

ಮುಖ್ಯಾಂಶಗಳು
* ಕೇಂದ್ರ ಸರ್ಕಾರದ ಸಂಧಾನ ಸಭೆ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ

* ಗುರುವಾರ ಮಧ್ಯಾಹ್ನದವರೆಗೆ ನೀರು ಬಿಡದಿರಲು  ನಿರ್ಧಾರ
* ಸರ್ವಪಕ್ಷ ಸಭೆಯ ಸಲಹೆ ಪಾಲಿಸಿದ ಸರ್ಕಾರ

ಉಮಾ ಮಧ್ಯಸ್ಥಿಕೆಗೆ ಡಿಎಂಕೆ ತಕರಾರು
ಚೆನ್ನೈ (ಪಿಟಿಐ): ಕರ್ನಾಟಕ ಮತ್ತು ತಮಿಳುನಾಡು ನಡುವಣ ಕಾವೇರಿ ನೀರು ಹಂಚಿಕೆ ವಿವಾದ ಪರಿಹಾರಕ್ಕೆ ಗುರುವಾರ ನಡೆಸಲು ನಿರ್ಧರಿಸಿರುವ ಸಂಧಾನ ಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ಅವರೇ ವಹಿಸಬೇಕು ಎಂದು ಡಿಎಂಕೆ ಆಗ್ರಹಿಸಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕದ ನಿಲುವನ್ನು ಸಮರ್ಥಿಸುವಂತಹ ಹೇಳಿಕೆಗಳನ್ನು ಉಮಾಭಾರತಿ ಅವರು ನೀಡಿದ್ದಾರೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಹಾಗಾಗಿ ಅವರು ಅಧ್ಯಕ್ಷತೆ ವಹಿಸಿದ ಸಭೆಯಲ್ಲಿ ಯಾವುದೇ ತೀರ್ಮಾನ ಆದರೂ ಅದರ ಬಗ್ಗೆ ಅನುಮಾನಗಳು ಏಳಬಹುದು ಎಂದು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಸಭೆಯ ಅಧ್ಯಕ್ಷತೆ ವಹಿಸಿದರೆ ಮಾತ್ರ ಎರಡೂ ರಾಜ್ಯಗಳಿಗೆ ಸ್ವೀಕಾರಾರ್ಹ ನಿರ್ಧಾರಕ್ಕೆ ಬರುವುದಕ್ಕೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
key word: kaveri-water-revolution-news-bangalore

Wednesday, September 28, 2016

ನೀರು ಬಿಟ್ಟರೆ ಸರ್ಕಾರದ ವಿರುದ್ಧ ಹೋರಾಟ; ಸಂಘಟನೆಗಳ ಎಚ್ಚರಿಕೆ


ಬೆಂಗಳೂರು: (kannadaevision.in)ಸುಪ್ರೀಂಕೋರ್ಟ್‌ ಮತ್ತೆ ಮೂರು ದಿನ ನೀರು ಹರಿಸುವಂತೆ ನೀಡಿದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕನ್ನಡಪರ ಸಂಘಟನೆಗಳು, ಸರ್ಕಾರ ಸದನದಲ್ಲಿ ತೆಗೆದುಕೊಂಡ ತೀರ್ಮಾನಕ್ಕೆ ಬದ್ಧವಾಗಿದ್ದರೆ ಸರ್ಕಾರದ ಬೆಂಬಲಕ್ಕೆ ತಾವು ನಿಲ್ಲುವುದಾಗಿ ಅಭಯ ನೀಡಿವೆ.
ಪ್ರತಿಭಟನೆ, ಮುಷ್ಕರ, ಬಂದ್‌ ಸೇರಿದಂತೆ ಎಲ್ಲ ಪ್ರಯತ್ನ ನಡೆಸಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಸದನದಲ್ಲಿ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ. ಅದಕ್ಕೆ ಸರ್ಕಾರ ಬದ್ಧವಾಗಿರಬೇಕು. ಯಾವುದೇ ಕಾರಣಕ್ಕೂ ನೀರು ಹರಿಸಬಾರದು.
ತೀರ್ಪಿಗೆ ಮಣಿದು ನೀರು ಹರಿಸಿದರೆ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಕನ್ನಡಪರ ಸಂಘಟನೆಗಳ ಮುಖಂಡರು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂಕೋರ್ಟ್‌ ತೀರ್ಪು ಹೊರಬಿದ್ದ ಬೆನ್ನಲ್ಲೇ ಕರ್ನಾಟಕ ರಕ್ಷಣಾ
ವೇದಿಕೆ (ಪ್ರವೀಣ್‌ಶೆಟ್ಟಿ ಬಣ), ಕನ್ನಡ ಚಳವಳಿ ವಾಟಾಳ್‌ ಪಕ್ಷ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳು
ಮಂಗಳವಾರ ಸಂಜೆ ಸಭೆ ನಡೆಸಿದವು.

"ಸದ್ಯದ ಸ್ಥಿತಿಯಲ್ಲಿ ನಮಗೆ ಕುಡಿಯುವ ನೀರು ಮುಖ್ಯವೇ ಹೊರತು, ಆದೇಶ ಪಾಲನೆ ಅಲ್ಲ. ಆದ್ದರಿಂದ ಸರ್ಕಾರ
ತನ್ನ ನಿಲುವಿಗೆ ಬದ್ಧವಾಗಿರಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧವೂ ನಿಲ್ಲಬೇಕಾಗುತ್ತದೆ. ಒಟ್ಟಾರೆ ಸರ್ಕಾರದ
ಸರ್ವಪಕ್ಷ ಸಭೆ ನಂತರ ಮುಂದಿನ ನಡೆ ಬಗ್ಗೆ ತೀರ್ಮಾನಿಸಲಾಗುವುದು' ಎಂದು ಕರವೇ ಮುಖಂಡ ಪ್ರವೀಣ್‌
ಶೆಟ್ಟಿ ತಿಳಿಸಿದರು.

ರೈತರ ಬೆಂಬಲಕ್ಕೆ ಕಸಾಪ: "ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತಿದ್ದರೂ ರೈತರ ಬೆಂಬಲಕ್ಕೆ ಇರುತ್ತದೆ. ರೈತರ ಪರ
ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಮ್ಮ ಬೆಂಬಲ ಇದೆ. ಮುಂದಿನ ಕನ್ನಡದ ನೆಲ-ಜಲ ರಕ್ಷಣೆಗೆ ಸಂಬಂಧಿಸಿದ ಹೋರಾಟಕ್ಕೆ ಬದ್ಧವಾಗಿರುತ್ತೇವೆ' ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಸ್ಪಷ್ಟಪಡಿಸಿದ್ದಾರೆ.

ನೀರು ಬಿಟ್ಟರೆ ಜನರಿಗೆ ದ್ರೋಹ:
ಒಂದು ಕ್ಯುಸೆಕ್‌ ನೀರನ್ನೂ ಬಿಡಲು ಸಾಧ್ಯವಿಲ್ಲದ ಸಂಕಷ್ಟದ ಪರಿಸ್ಥಿತಿಯಲ್ಲಿ ಕರ್ನಾಟಕ ಇದೆ. ಇದೇ ಕಾರಣಕ್ಕೆ
ಸದನದಲ್ಲಿ ಕಾವೇರಿ ಕುಡಿಯಲು ಮಾತ್ರ ಬಳಸಬೇಕು ಎಂಬ ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ. ನೀರು ಬಿಡದೆಯೇ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿ ಕೊಡಬೇಕು. ನಿರ್ಣಯ ಮೀರಿ ನೀರು ಬಿಟ್ಟರೆ ಸರ್ಕಾರ ರಾಜ್ಯದ ಜನರಿಗೆ ದ್ರೋಹ ಮಾಡಿದಂತಾಗುತ್ತದೆ. ನೀರು ಹರಿಸಿದರೆ ಮತ್ತೆ ಬೀದಿಗಿಳಿಯಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ
ರಾಜ್ಯ ಘಟಕದ ಅಧ್ಯಕ್ಷ ಟಿ.ಎ. ನಾರಾಯಣಗೌಡ ಎಚ್ಚರಿಸಿದ್ದಾರೆ.

ಪ್ರಧಾನಿ ಮೌನ ಖಂಡನೀಯ- ವಾಟಾಳ್‌: "ನಾವೇನೂ ನೀರನ್ನು ಜಲಾಶಯಗಳಲ್ಲಿ ಕದ್ದು ಇಟ್ಟುಕೊಂಡಿಲ್ಲ. ಎಲ್ಲವೂ ಮುಕ್ತವಾಗಿದೆ. ಪರಿಸ್ಥಿತಿಯನ್ನು ನೋಡಿಯೂ ಈ ರೀತಿ ಆದೇಶ ಒಳ್ಳೆಯದಲ್ಲ. ಈ ಮಧ್ಯೆ ಪ್ರಧಾನಿ ಮೌನ ವಹಿಸಿರುವುದು ಖಂಡನೀಯ. ಎಲ್ಲ ರಾಜ್ಯಗಳನ್ನೂ ಸಮನಾಗಿ ನೋಡಬೇಕಾದ ಪ್ರಧಾನಿ, ಸಮಸ್ಯೆ ಬಂದಾಗ ಬಗೆಹರಿಸುವ ಪ್ರಯತ್ನ ಮಾಡಬೇಕು. ಬುಧವಾರ ನಡೆಯುವ ಸರ್ವಪಕ್ಷ ಸಭೆಯ ತೀರ್ಮಾನದ ಬಳಿಕ ಮುಂದಿನ ಹೋರಾಟದ ಬಗ್ಗೆ ನಿರ್ಧರಿಸಲಾಗುವುದು' ಎಂದು ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ.
key word: kaveri water revolution- bangalore-harthal



ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಿಬಿಎಂಪಿ ನೂತನ ಮೇಯರ್ ಆಗಿ ಜಿ. ಪದ್ಮಾವತಿ ಆಯ್ಕೆ

ಬೆಂಗಳೂರು:(kannadaevision.in) ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್‌ಸ್ಥಾನಕ್ಕೆ ಪ್ರಕಾಶ್‌ ನಗರದ ಕಾಂಗ್ರೆಸ್‌ ಸದಸ್ಯೆ ಜಿ. ಪದ್ಮಾವತಿ ಆಯ್ಕೆಯಾಗಿದ್ದಾರೆ.
ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದ್ಮಾವತಿ ಅವರು 142  ಮತ ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಇವರ ಪ್ರತಿಸ್ಪರ್ಧಿ ಲಕ್ಷ್ಮಿ ಅವರಿಗೆ ಒಟ್ಟು 120 ಮತ ಲಭಿಸಿದೆ.

ಕಣದಲ್ಲಿ ಯಾರೆಲ್ಲ ಇದ್ದರು?

ಮೇಯರ್ ಸ್ಥಾನ: ಪ್ರಕಾಶ್ ನಗರದ ಸದಸ್ಯೆ ಕಾಂಗ್ರೆಸ್ ಅಭ್ಯರ್ಥಿ  ಪದ್ಮಾವತಿ VS ಗಣೇಶ ಮಂದಿರ ವಾರ್ಡ್ ಸದಸ್ಯೆ ಬಿಜೆಪಿ ಅಭ್ಯರ್ಥಿ ಡಿ.ಎಚ್. ಲಕ್ಷ್ಮಿ


ಉಪಮೇಯರ್  ಸ್ಥಾನ:  ರಾಧಾಕೃಷ್ಣ ನಗರದ ಸದಸ್ಯ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ VS ಹೆಚ್‍ಎಸ್‍ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ

ಉಪಮೇಯರ್  ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಂ. ಆನಂದ್ ಅವರು 142 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆ
ಮೇಯರ್ ಚುನಾವಣೆ ಪ್ರಕ್ರಿಯೆ ಬುಧವಾರ ಬೆಳಗ್ಗೆ 11.30ಕ್ಕೆ ಆರಂಭವಾಗಿತ್ತು, ಬಿಬಿಎಂಪಿ ಕಚೇರಿಯಲ್ಲಿ ಒಟ್ಟಾರೆ 269 ಸದಸ್ಯರು ಮತದಾನದ ಹಕ್ಕು ಹೊಂದಿದ್ದು ಕೈ ಎತ್ತುವ ಮೂಲಕ ಮತದಾನ ಮಾಡಿದ್ದಾರೆ.

ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ಅವರು ಚುನಾವಣಾ ಪ್ರಕ್ರಿಯೆ ನಡೆಸಿದ್ದರು.
key word : bbmp mayor padmavathi

ವಾಹನ ಅಪಘಾತದಲ್ಲಿ ಬಿಜೆಪಿ ಕಾರ್ಯಕರ್ತ ಮೃತ್ಯು: ಪಂ. ಸದಸ್ಯನಿಗೆ ಗಂಭೀರ ಗಾಯ


ಮಂಜೇಶ್ವರ:(kannadaevision.in) ತೊಕ್ಕೋಟ್‌ನಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ವಾಹನ ಅಪಘಾತದಲ್ಲಿ ಮಂಜೇಶ್ವರ ಕಣ್ವತೀರ್ಥ ನಿವಾಸಿಯಾದ ಬಿಜೆಪಿ  ಕಾರ್ಯ ಕರ್ತರೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಇವರ ಜತೆಗಿದ್ದ ಬಿಜೆಪಿ ನೇತಾರನಾದ ಪಂಚಾಯತ್ ಸದಸ್ಯ ಗಂಭೀರ ಗಾಯಗೊಂಡಿದ್ದಾರೆ.ಕಣ್ವತೀರ್ಥ ಕಾಂತಚ್ಚಿಲ್ ಶ್ರೀರಾಮ ಸೇವಾ ಭಜನಾ ಮಂದಿರ ಬಳಿಯ ನಿವಾಸಿ ದಿ| ಭೋಜ ದೇವಾಡಿಗ ಎಂಬವರ ಪುತ್ರ ಗಂಗಾಧರ.ಕೆ (೪೭) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಣ್ವತೀರ್ಥ ನಿವಾಸಿಯೂ ಮಂಜೇಶ್ವರ ಗ್ರಾಮ ಪಂಚಾಯತ್ ೧ನೇ ವಾರ್ಡ್ ಬಿಜೆಪಿ ಸದಸ್ಯನಾದ ಭಗವಾನ್‌ದಾಸ್ (೪೫) ಎಂಬವರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಭಗವಾನ್‌ದಾಸ್ ತೊಕ್ಕೋಟ್‌ನ ಅಂಬಿಕಾರೋಡ್‌ನಲ್ಲಿ ಅಲ್ಯುಮಿನಿಯಂ ಫ್ಯಾಬ್ರಿಕೇಶನ್ ಸಂಸ್ಥೆ ನಡೆಸುತ್ತಿದ್ದಾರೆ. ಇವರ ಸಂಸ್ಥೆಗೆ ನಿನ್ನೆ ರಾತ್ರಿ ಸಾಮಗ್ರಿಗಳನ್ನು ತಲುಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇವರು ಗಂಗಾಧರರನ್ನು ಕರೆದುಕೊಂಡು ತನ್ನ ಬೈಕ್‌ನಲ್ಲಿ  ಅತ್ತ ತೆರಳಿದ್ದರು.  ಬಳಿಕ ರಾತ್ರಿ ೧೦.೩೦ರ ವೇಳೆ ಇವರು ಮರಳುತ್ತಿದ್ದಾಗ ತೊಕ್ಕೋಟ್  ಹೆದ್ದಾರಿಯ ಡಿವೈಡರ್ ಮೂಲಕ ಬೈಕ್ ತಿರುಗುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರೊಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಗಂಭೀರ ಗಾಯಗೊಂಡ ಗಂಗಾಧರರನ್ನು ತೊಕ್ಕೋ ಟ್‌ನ ಆಸ್ಪತ್ರೆಗೆ ತಲುಪಿಸುತ್ತಿದ್ದಂತೆ ಅವರು ಮೃತಪಟ್ಟರು. ಅಪಘಾತದಲ್ಲಿ ಬೈಕ್ ಸಂಪೂ ರ್ಣ ನಜ್ಜುಗುಜ್ಜಾಗಿದ್ದು, ಢಿಕ್ಕಿ ಹೊಡೆದ ಕಾರು ಪಲ್ಟಿಹೊಡೆದಿದೆ.  ಅಪಘಾತ ತಕ್ಷಣ ಕಾರು ಚಾಲಕನನ್ನು ಅಲ್ಲಿ ಸೇರಿದವರು ಹಿಡಿದು ಉಳ್ಳಾಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಭಗವಾನ್‌ದಾಸ್ ಬೈಕ್ ಚಲಾಯಿಸಿದ್ದು, ಗಂಗಾಧರ ಹಿಂಬದಿ ಸವಾರನಾಗಿದ್ದರೆನ್ನಲಾಗಿದೆ.
ಕಣ್ವತೀರ್ಥದಲ್ಲಿ ಬಡಗಿ ವೃತ್ತಿ ನಡೆಸುತ್ತಿದ್ದ ಗಂಗಾಧರ ಬಿಜೆಪಿಯ ಸಕ್ರಿಯ ಕಾರ್ಯಕರ್ತನೂ, ಸಮಾಜಸೇವಕನೂ ಆಗಿದ್ದರು.  ಮೃತರು ತಾಯಿ ಚಂದ್ರಾವತಿ, ಪತ್ನಿ ರೇಖಾ, ಪುತ್ರ ದೀಪಕ್ (ಮಂಗಳೂರಿನಲ್ಲಿ ಪಿಯುಸಿ ವಿದ್ಯಾರ್ಥಿ), ಸಹೋದರ-ಸಹೋದರಿ ಯರಾದ ಶಿವದಾಸ್, ಸತೀಶ್, ರಾಜೇಶ್, ಗೀತ, ವಿನಯಾ ಭಾಸ್ಕರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಗಂಗಾಧರರ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿ ಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮನೆಗೆ ತಂದು ತಲಪಾಡಿ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಸುವು ದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.
key words :Manjeshwara Accident death

ಬಿಜೆಪಿ-ಕಾಂಗ್ರೆಸ್ ವಾಕ್ಸಮರ ಮೇಯರ್ ಚುನಾವಣೆ ನಂತರ ಸಭಾತ್ಯಾಗ ಮಾಡಿದ ಬಿಜೆಪಿ



ಬೆಂಗಳೂರು:  (kannadaevision.blogspot.in)  ಬುಧವಾರ ಬಿಬಿಎಂಪಿ ಕಚೇರಿಯಲ್ಲಿ ನಡೆದ ಮೇಯರ್ ಚುನಾವಣೆ ಪ್ರಕ್ರಿಯೆ ನಂತರ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.ಮೇಯರ್ ಚುನಾವಣೆ ವೇಳೆ ಮತದಾನ ಮಾಡಲು ಬಿಜೆಪಿ ಸದಸ್ಯರಾದ ಪಿ.ಸಿ ಮೋಹನ್ ಮತ್ತು ರಾಜೀವ್ ಚಂದ್ರಶೇಖರ್ ತಡವಾಗಿ ಆಗಮಿಸಿದ್ದರು. ತಡವಾಗಿ ಆಗಮಿಸಿದ ಸದಸ್ಯರಿಗೆ ಮತದಾನ ಮಾಡಲು ಅವಕಾಶ ನೀಡಲು ಚುನಾವಣಾ ಪ್ರಕ್ರಿಯೆ ನಡೆಸಿದ್ದ ಪ್ರಾದೇಶಿಕ ಆಯುಕ್ತೆ ವಿ.ಜಯಂತಿ ನಿರಾಕರಿಸಿದ್ದಾರೆ. ಈ ವಿಷಯಕ್ಕೆ ರೊಚ್ಚಿಗೆದ್ದು ಬಿಜೆಪಿ ವಾಕ್ಸಮರ ನಡೆಸಿದೆ.


ಕಾವೇರಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಸರ್ವ ಪಕ್ಷ ಸಭೆಯಲ್ಲಿ ಹಾಜರಾಗಿದ್ದ ಕಾರಣ ಬಿಬಿಎಂಪಿ ಕಚೇರಿಗೆ ಬರಲು ತಡವಾಯಿತು ಎಂದು ಮತದಾನ ಅವಕಾಶ ವಂಚಿತರಾದ ಸದಸ್ಯರು ಹೇಳಿದ್ದಾರೆ, ಆದರೆ ವಿ. ಜಯಂತಿ ಯಾವುದೇ ಕಾರಣಕ್ಕೂ ತಡವಾಗಿ ಬಂದವರಿಗೆ ಮತದಾನ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿ ಅವಕಾಶವನ್ನು ನಿರಾಕರಿಸಿದ್ದರು.ಏತನ್ಮಧ್ಯೆ, ಇಲ್ಲಿಯವರೆಗೆ ಇಲ್ಲದ ಕಾವೇರಿ ಪ್ರೀತಿ ಈಗ ಹೇಗೆ ಬಂತು. ನಿಮಗೆ ಮಾನ ಮರ್ಯಾದೆ ಇಲ್ವಾ? ಎಂದು ಕಾಂಗ್ರೆಸ್ ಸದಸ್ಯರು ಬಿಜೆಪಿ ಸದಸ್ಯರನ್ನು ಲೇವಡಿ ಮಾಡಿದಾಗ ಬಿಬಿಎಂಪಿ ಸಭಾಂಗಣ ಅಕ್ಷರಶಃ ರಣರಂಗವಾಗಿ ಮಾರ್ಪಾಡಾಯಿತು.



ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿಜೆಪಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು,ಕೋಪಗೊಂಡ ಬಿಜೆಪಿ ಸದಸ್ಯರು ನಿಯಮಾವಳಿಯ ಪ್ರತಿಯನ್ನು ಹರಿದೆಸಿದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಸ್ವಲ್ಪ ಹೊತ್ತು ವಾಕ್ಸಮರ ನಡೆಸಿ ಮೇಯರ್ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಆ ಹೊತ್ತಿಗೆ ಹೆದರಿ ಓಡಿಹೋಗುತ್ತಿದ್ದೀರಾ? ಎಂದು ಕಾಂಗ್ರೆಸ್ ಸದಸ್ಯರು ಬಿಜೆಪಿಯವರನ್ನು ಕಿಚಾಯಿಸಿದರು.

Keywords: Bangaluru-news-mayor-election-campaign